-->

Ganesha Chathurti importance , ಗಣೇಶ ಚತುರ್ಥಿ ಮಹತ್ವ

ಶ್ರೀ ಗಣೇಶ ಚತುರ್ಥಿಯ ತಿಥಿಯಂದು ಪೃಥ್ವಿಯ ಮೇಲೆ ಶ್ರೀ ಗಣೇಶ ತತ್ವವು ೧೦೦೦ಪಟ್ಟು ಹೆಚ್ಚು ಕಾರ್ಯರತವಾಗುತ್ತದೆ. 
ಈ ದಿನದಂದು ಆದಷ್ಟು ಹೆಚ್ಚು ' *ಶ್ರೀ ಗಣೇಶಾಯ ನಮಃ* |' ಅಥವಾ ' *ಓಂ ಗಂ ಗಣಪತಯೇ ನಮಃ* |' ಜಪಿಸಿ!

ಈ ಗಣೇಶ ಚತುರ್ಥಿಯಂದು ನಾವೇನು ಮಾಡಬಹುದು ಎಂದು ಸಂಕ್ಷಿಪ್ತವಾಗಿ ನೋಡೋಣ




ಅ. ಸಾಕ್ಷಾತ್ ಶ್ರೀಗಣೇಶನು ನಮ್ಮ ಮನೆಗೆ ಬರುವವನಿದ್ದಾನೆ ಎಂಬ ಭಾವವನ್ನಿರಿಸಿ ಎಲ್ಲ ಪೂರ್ವತಯಾರಿಗಳನ್ನು ಮಾಡುವುದು
ಆ. ಕುಟುಂಬದವರೆಲ್ಲ ಒಂದು ದಿನ ಮೊದಲೇ ಬರುವುದು
ಇ. ಮನೆ ಮತ್ತು ಪರಿಸರದ ಸ್ವಚ್ಛತೆ, ಅಲಂಕಾರ, ಪೂಜೆಯ ತಯಾರಿ ಇತ್ಯಾದಿ ಸೇವೆಗಳನ್ನು ಎಲ್ಲರೂ ಸೇರಿ ಮಾಡುವುದು
ಈ. ಗಣೇಶೋತ್ಸವದಲ್ಲಿ ಗಣಪತಿಗೆ ಮೊದಲ ಮಹತ್ವ ಮತ್ತು ಅಲಂಕಾರ ಹಾಗೂ ಆಡಂಬರಕ್ಕೆ ದ್ವಿತೀಯ ಮಹತ್ವವನ್ನು ಕೊಡಬೇಕು ಎಂಬ ಅರಿವಿಟ್ಟುಕೊಂಡಿರಬೇಕು (ಗಣಪತಿಯ ಮೂರ್ತಿಯನ್ನು ಇಡುವ ಸ್ಥಳವನ್ನು ನಿರಂತರವಾಗಿ ಸ್ವಚ್ಛವಾಗಿರಿಸುವುದು, ಅಲ್ಲಿ ದೀಪ ಬೆಳಗಿಸಿಡುವುದು, ಪ್ರತ್ಯಕ್ಷ ಗಣಪತಿಯೇ ಅಲ್ಲಿ ಕುಳಿತಿದ್ದಾನೆ ಎಂಬ ಭಾವದಿಂದ ವ್ಯವಹರಿಸುವುದು)
ಉ. ಮನೆಯ ಮುಖ್ಯದ್ವಾರಕ್ಕೆ ಮಾವಿನಎಲೆ ಮತ್ತು ಗೊಂಡೆ ಹೂವುಗಳ ಸಾತ್ತ್ವಿಕ ತೋರಣವನ್ನು ಕಟ್ಟುವುದು, ಮನೆಯೆದುರು ಹಾಗೂ ಗಣಪತಿಯ ಎದುರು ಸಾತ್ತ್ವಿಕ ರಂಗೋಲಿ ಯನ್ನು ಹಾಕುವುದು ಮತ್ತು ಅದನ್ನು ಹಾಕುವಾಗ ನಮ್ಮೊಂದಿಗೆ ಮಕ್ಕಳನ್ನು ಸೇರಿಸಿಕೊಳ್ಳುವುದು
ಊ. ಪ್ರತಿದಿನ ಗಣಪತಿಗೆ ಗರಿಕೆಯನ್ನು ಅರ್ಪಿಸುವುದು

*ಗಣೇಶನು ಏಕೆ ಪ್ರಥಮ ವಂದ್ಯನು*?

ಗಣಪತಿಯ ಅನುಮತಿಯಿಲ್ಲದೇ ಯಾವುದೇ ದಿಕ್ಕಿನಿಂದ ಇತರ ದೇವತೆಗಳು ಪೂಜಾಸ್ಥಳಕ್ಕೆ ಬರಲಾರರು; ಆದುದರಿಂದ ಎಲ್ಲ ಮಂಗಲಕಾರ್ಯಗಳಲ್ಲಿ ಅಥವಾ ಇತರ ಯಾವುದೇ ದೇವತೆಯ ಪೂಜೆ ಮಾಡುವಾಗ ಮೊದಲು ಗಣಪತಿಯ ಪೂಜೆ ಮಾಡುತ್ತಾರೆ. ಒಮ್ಮೆ ಗಣಪತಿಯು ದಿಕ್ಕುಗಳನ್ನು ಮುಕ್ತಗೊಳಿಸಿದರೆ ಯಾವ ದೇವತೆಯ ಪೂಜೆ ಮಾಡುವುದಿರುತ್ತದೆಯೋ, 
ಆ ದೇವತೆಯು ಪೂಜಾಸ್ಥಳಕ್ಕೆ ಬರಬಹುದು. ಇದನ್ನೇ ಮಹಾದ್ವಾರದ ಅಥವಾ ಮಹಾಗಣಪತಿಯ ಪೂಜೆ ಎನ್ನುತ್ತಾರೆ.

*ಮೂರ್ತಿ*

ಆವೆ(ಜೇಡಿ) ಮಣ್ಣಿನಿಂದ ತಯಾರಿಸಿದ ಮತ್ತು ಮಣೆಯ ಮೇಲೆ ಕುಳಿತುಕೊಂಡಿರುವ, ಮೂರ್ತಿಶಾಸ್ತ್ರಕ್ಕನುಸಾರ ತಯಾರಿಸಿದ, ನೈಸರ್ಗಿಕ ಬಣ್ಣಗಳನ್ನು ಹಚ್ಚಿದ ಮೂರ್ತಿಯನ್ನಿರಿಸಬೇಕು.

*ಹೆಚ್ಚಾಗಿ ಎಡಮುರಿ ಗಣಪತಿಯನ್ನೇ ಏಕೆ ಪೂಜೆ ಮಾಡುತ್ತಾರೆ*?

_ಬಲಗಡೆಯ ಸೊಂಡಿಲು_:

ಸೊಂಡಿಲಿನ ಪ್ರಾರಂಭದ ತಿರುವು ಬಲಗಡೆಗೆ ಇರುವ ಮೂರ್ತಿ ಎಂದರೆ ದಕ್ಷಿಣಮೂರ್ತಿ ಅಂದರೆ ದಕ್ಷಿಣಾಭಿಮುಖಿ ಮೂರ್ತಿ. ದಕ್ಷಿಣ ಎಂದರೆ ದಕ್ಷಿಣ ದಿಕ್ಕು ಅಥವಾ ಬಲಬದಿ. ಬಲಬದಿಯು ಸೂರ್ಯನಾಡಿಗೆ ಸಂಬಂಧಪಟ್ಟಿದೆ ಹಾಗೂ ದಕ್ಷಿಣ ದಿಕ್ಕು ಯಮಲೋಕದ ಕಡೆಗೆ ಕರೆದೊಯ್ಯುವುದಾಗಿದೆ. ಯಾರು ಯಮಲೋಕದ ದಿಕ್ಕನ್ನು ಎದುರಿಸಬಲ್ಲರೋ ಅವರು ಶಕ್ತಿಶಾಲಿಯಾಗಿರುತ್ತಾರೆ. ಅಂತೆಯೇ ಸೂರ್ಯನಾಡಿಯು ಚಲನೆಯಲ್ಲಿರುವವನು
ತೇಜಸ್ವಿಯಾಗಿರುತ್ತಾನೆ. ಇವೆರಡೂ ಅರ್ಥದಲ್ಲಿ ಬಲಗಡೆಗೆ ಸೊಂಡಿಲಿರುವ (ಬಲಮುರಿ) ಶ್ರೀಗಣಪತಿಗೆ ‘ಜಾಗೃತ’ ಗಣಪತಿ ಎಂದು ಹೇಳಲಾಗುತ್ತದೆ. ದಕ್ಷಿಣದಲ್ಲಿರುವ ಯಮಲೋಕದಲ್ಲಿ ಪಾಪ-ಪುಣ್ಯಗಳ ಪರೀಕ್ಷೆಯಾಗುವುದರಿಂದ ಆ ದಿಕ್ಕು ಬೇಡವೆನಿಸುತ್ತದೆ. ಮೃತ್ಯುವಿನ ನಂತರ ದಕ್ಷಿಣ ದಿಕ್ಕಿಗೆ ಹೋದಾಗ (ಯಮಲೋಕಕ್ಕೆ) ಯಾವ ರೀತಿ ಪರೀಕ್ಷೆ ಆಗುತ್ತದೆಯೋ ಅದೇ ರೀತಿಯ ಪರೀಕ್ಷೆಯು ಮೃತ್ಯುವಿನ ಮೊದಲು ದಕ್ಷಿಣಕ್ಕೆ ಮುಖ ಮಾಡಿ
ಕುಳಿತರೆ ಅಥವಾ ಕಾಲು ಚಾಚಿ ಮಲಗಿದರೆ ಆಗುತ್ತದೆ; ದಕ್ಷಿಣಾಭಿಮುಖಿ ಮೂರ್ತಿಯ ಪೂಜೆಯನ್ನು ನಿತ್ಯದ ಪದ್ಧತಿಯಂತೆ ಮಾಡಲಾಗುವುದಿಲ್ಲ; ಏಕೆಂದರೆ, ದಕ್ಷಿಣದಿಂದ ‘ತಿರ್ಯಕ್’ 
(ರಜ-ತಮ) ಲಹರಿಗಳು ಬರುತ್ತವೆ. ಇಂತಹ ಮೂರ್ತಿಗೆ ಕರ್ಮಕಾಂಡದಲ್ಲಿನ ಎಲ್ಲ ನಿಯಮಗಳನ್ನೂ ಕಟ್ಟುನಿಟ್ಟಾಗಿ ಪಾಲಿಸಿ, ಪೂಜಾವಿಧಿಯನ್ನು ಮಾಡಲಾಗುತ್ತದೆ. ಅದರಿಂದ ಸಾತ್ವಿಕತೆಯು ಹೆಚ್ಚುತ್ತದೆ ಮತ್ತು ದಕ್ಷಿಣ ದಿಕ್ಕಿನಿಂದ ಬರುವ ರಜ-ತಮ ಲಹರಿಗಳಿಂದ ತೊಂದರೆಯಾಗುವುದಿಲ್ಲ.

_ಎಡಗಡೆಯ ಸೊಂಡಿಲು_:

ಸೊಂಡಿಲಿನ ಪ್ರಾರಂಭದ ತಿರುವು ಎಡಗಡೆಗೆ ಇರುವ ಮೂರ್ತಿ ಎಂದರೆ ವಾಮಮುಖಿ ಮೂರ್ತಿ. ವಾಮ ಎಂದರೆ ಎಡಬದಿಯ ದಿಶೆ ಅಥವಾ ಉತ್ತರ ದಿಕ್ಕು. ಎಡಬದಿಗೆ ಚಂದ್ರನಾಡಿ ಇದ್ದು ಅದು ಶೀತಲತೆಯನ್ನು ಕೊಡುತ್ತದೆ; ಉತ್ತರ ದಿಕ್ಕು ಅಧ್ಯಾತ್ಮಕ್ಕೆ ಪೂರಕ ಹಾಗೂ ಆನಂದ ದಾಯಕವಾಗಿದೆ; ಆದ್ದರಿಂದಲೇ ವಾಮಮುಖಿ (ಎಡಮುರಿ) ಶ್ರೀಗಣಪತಿಯನ್ನು ಪೂಜೆಯಲ್ಲಿಡುತ್ತಾರೆ.

*ಶ್ರೀಗಣೇಶ ಮೂರ್ತಿಯ ಅಲಂಕಾರ ಹೀಗಿರಲಿ*!

ಇತ್ತೀಚೆಗೆ ಗಣೇಶೋತ್ಸವಕ್ಕಾಗಿ ಮಾಡಲಾಗುವ ಅಲಂಕಾರಕ್ಕಾಗಿ ವಿವಿಧ ರೀತಿಯ ಬಣ್ಣಗಳಿಂದ ಹಾಗೂ ಮಿನುಗುವ ಕಾಗದ, ಥರ್ಮಾಕೋಲ್, ಪ್ಲಾಸ್ಟಿಕ್ ಮುಂತಾದವುಗಳನ್ನು ಉಪಯೋಗಿಸಲಾಗುತ್ತದೆ. ಅಲ್ಲದೇ ಬಣ್ಣಬಣ್ಣದ ವಿದ್ಯುತ್ ದೀಪಗಳ ಮಾಲೆಯನ್ನೂ ಬಳಸಲಾಗುತ್ತದೆ. ಈ ವಸ್ತುಗಳು ಕೃತಕ ಹಾಗೂ ರಾಸಾಯನಿಕ ವಸ್ತುಗಳಿಂದ ತಯಾರಿಸಲಾಗುತ್ತದೆ. ಹಾಗಾಗಿ ಈ ವಸ್ತುಗಳಲ್ಲಿ ರಜತಮದ ಪ್ರಮಾಣವು ಹೆಚ್ಚಿರುತ್ತದೆ. ಅಲ್ಲದೇ ಅಂತಹವುಗಳು
ವಾತಾವರಣದಲ್ಲಿನ ರಜತಮವನ್ನು ಆಕರ್ಷಿಸಿ ಅಲ್ಲಿನ ಪರಿಸರವನ್ನು ರಜ-ತಮಯುಕ್ತಗೊಳಿಸುತ್ತದೆ. ಆಧ್ಯಾತ್ಮಿಕ ದೃಷ್ಟಿಯಿಂದ ಪ್ರತಿಯೊಂದು ದೇವತೆಯ ಒಂದು ವಿಶಿಷ್ಟ ತತ್ವವಿರುತ್ತದೆ. ಹಾಗಾಗಿ ಗಣೇಶ ಚತುರ್ಥಿಯಂದು ಪೃಥ್ವಿಯ ಮೇಲೆ ಹೆಚ್ಚು ಪ್ರಮಾಣದಲ್ಲಿ ಬರುವ ಗಣೇಶತತ್ವವನ್ನು ಆಕರ್ಷಿಸುವ ಸಾತ್ವಿಕ ವಸ್ತುಗಳನ್ನು ಬಳಸಬೇಕು. ಅದಕ್ಕೆ ಕೆಳಗಿನ ವಸ್ತುಗಳನ್ನು ಬಳಸಿರಿ.

ನೈಸರ್ಗಿಕ ಹೂವು-ಎಲೆಗಳಿಂದ ತಯಾರಿಸಿದ ತೋರಣಗಳು

ಕೆಂಪು ಬಣ್ಣದ ಹೂವು ಹಾಗೂ ದೂರ್ವೆ, ಶಮಿಯ ಎಲೆಗಳು

ಶ್ರೀಗಣೇಶನ ತತ್ವವನ್ನು ಆಕರ್ಷಿಸುವ ರಂಗೋಲಿ

ಶ್ರೀಗಣೇಶನ ಸಾತ್ವಿಕ ನಾಮಜಪದ ಪಟ್ಟಿಗಳು ಇತ್ಯಾದಿ.

*ಧಾರ್ಮಿಕ ವಿಧಿಗಳು*

ಅ. ಪೂಜೆಯನ್ನು ಮಾಡುವವರು ಪೂಜೆಯ ಸಂಪೂರ್ಣ ತಯಾರಿಯನ್ನು ಮಾಡಿಕೊಂಡು ಶುಚಿರ್ಭೂತರಾಗಿರಬೇಕು.
ಆ. ಧಾರ್ಮಿಕ ವಿಧಿಗಳಲ್ಲಿನ ಚೈತನ್ಯದ ಲಾಭವನ್ನು ಪುರೋಹಿತರ ಹಾಗೂ ಯಜಮಾನರ ಜೊತೆಗೆ ಎಲ್ಲರೂ ಆ ಜಾಗದಲ್ಲಿ ಉಪಸ್ಥಿತರಿದ್ದುಕೊಂಡು ಪಡೆದುಕೊಳ್ಳಬೇಕು.
ಇ. ಧಾರ್ಮಿಕ ವಿಧಿಗಳನ್ನು ಔಪಚಾರಿಕತೆ ಎಂದು ಮಾಡದೇ ಅದರ ಹಿಂದಿನ ಶಾಸ್ತ್ರವನ್ನು ಅರಿತುಕೊಳ್ಳಲು ಪ್ರಯತ್ನಿಸಬೇಕು ಮತ್ತು ಪೂಜಾಸ್ಥಳದಲ್ಲಿ ಶಿಸ್ತು ಮತ್ತು ಪಾವಿತ್ರ್ಯವನ್ನು ಕಾಪಾಡಬೇಕು.

ಗರಿಕೆ ಮತ್ತು ಕೆಂಪು ಹೂವುಗಳು!

ಗರಿಕೆ(ದೂರ್ವೆ)

ಗಣೇಶನ ಪೂಜೆಯಲ್ಲಿ ಗರಿಕೆಗೆ ವಿಶೇಷ ಮಹತ್ವವಿದೆ. ಇದನ್ನು ದೂರ್ವೆ ಎಂದೂ ಕರೆಯುತ್ತಾರೆ. ದೂರ್ವೆ ಈ ಶಬ್ದವು ದೂಃ ಅವಮ್ ಹೀಗೆ ಆಗಿದೆ. ‘ದೂಃ’ ಅಂದರೆ ದೂರದಲ್ಲಿ ಇದ್ದದ್ದು ಮತ್ತು ‘ಅವಮ್’ ಅಂದರೆ ಯಾವುದು ಹತ್ತಿರ ತರುತ್ತದೆಯೋ ಅದು. ದೂರದಲ್ಲಿರುವ ಗಣೇಶನ ಪವಿತ್ರಕಗಳನ್ನು ಯಾವುದು ಹತ್ತಿರ ತರುತ್ತದೆಯೋ, ಅದುವೇ ದೂರ್ವೆಯಾಗಿದೆ, ಅಂದರೆ ಗರಿಕೆಯಾಗಿದೆ. ಶ್ರೀಗಣಪತಿಗೆ ಅರ್ಪಿಸಬೇಕಾದ ಗರಿಕೆಯು ಎಳೆಯದಾಗಿರಬೇಕು.
ಇದನ್ನೇ ‘ಬಾಲತೃಣಮ್’ ಎನ್ನುತ್ತಾರೆ. ಒಣಗಿದಾಗ ಅದನ್ನು ಒಂದು ವಿಧದ ಹಲ್ಲು ಎಂದು ಪರಿಗಣಿಸಬಹುದು. ಗರಿಕೆಗಳಿಗೆ ೩, ೫, ೭ ಈ ರೀತಿಯಲ್ಲಿ ಬೆಸ ಸಂಖ್ಯೆಯ ಗರಿಗಳು ಇರಬೇಕು.

ಕೆಂಪು ಹೂವುಗಳು

ಶ್ರೀಗಣಪತಿಯ ಬಣ್ಣವು ಕೆಂಪಾಗಿರುತ್ತದೆ. ಅವನ ಪೂಜೆಯಲ್ಲಿ ಕೆಂಪು ವಸ್ತ್ರ, ಕೆಂಪು ಹೂವು ಮತ್ತು ರಕ್ತಚಂದನವನ್ನು ಬಳಸುತ್ತಾರೆ. ಅವುಗಳ ಕೆಂಪು ಬಣ್ಣದಿಂದ ವಾತಾವರಣದಲ್ಲಿರುವ ಶ್ರೀಗಣಪತಿಯ ಪವಿತ್ರಕಗಳು ಮೂರ್ತಿಯ ಕಡೆಗೆ ಹೆಚ್ಚು ಪ್ರಮಾಣದಲ್ಲಿ ಆಕರ್ಷಿತವಾಗಿ ಮೂರ್ತಿಯನ್ನು ಜಾಗೃತಗೊಳಿಸಲು ಸಹಾಯವಾಗುತ್ತದೆ.

*ಮೋದಕ*

‘ಮೋದ’ ಎಂದರೆ ಆನಂದ ಮತ್ತು ‘ಕ’ ಎಂದರೆ ಚಿಕ್ಕ ಭಾಗ. ಮೋದಕವೆಂದರೆ ಆನಂದದ ಚಿಕ್ಕ ಭಾಗ. ಮೋದಕದ ಆಕಾರವು ತೆಂಗಿನಕಾಯಿಯಂತೆ, ಎಂದರೆ ‘ಖ’ ಈ ಬ್ರಹ್ಮರಂಧ್ರದಲ್ಲಿನ ಟೊಳ್ಳಿನಂತಿರುತ್ತದೆ. ಕುಂಡಲಿನಿಯು ‘ಖ’ದವರೆಗೆ ತಲುಪಿದಾಗ ಆನಂದದ ಅನುಭೂತಿಯು ಬರುತ್ತದೆ. ಕೈಯಲ್ಲಿ ಹಿಡಿದ ಮೋದಕವೆಂದರೆ, ಆನಂದವನ್ನು ಪ್ರದಾನಿಸುವ ಶಕ್ತಿ.

ಮೋದಕವು ಜ್ಞಾನದ ಪ್ರತೀಕವಾಗಿದೆ; ಆದುದರಿಂದ ಅದನ್ನು ಜ್ಞಾನಮೋದಕವೆಂದೂ ಕರೆಯುತ್ತಾರೆ. ಮೊದಲು, ಜ್ಞಾನವು ಸ್ವಲ್ಪವೇ ಇದೆ ಎಂದೆನಿಸುತ್ತದೆ (ಮೋದಕದ ತುದಿಯು ಇದರ ಪ್ರತೀಕ ವಾಗಿದೆ); ಆದರೆ ಅಧ್ಯಯನ ಮಾಡತೊಡಗಿದಾಗ ಜ್ಞಾನವು ಬಹಳ ವಿಶಾಲವಾಗಿದೆ ಎಂಬುದು ತಿಳಿಯುತ್ತದೆ. (ಮೋದಕದ ಕೆಳಭಾಗವು ಇದರ ಪ್ರತೀಕವಾಗಿದೆ) ಮೋದಕವು ಸಿಹಿಯಾಗಿರುತ್ತದೆ ಅದೇ ರೀತಿ ಜ್ಞಾನದ ಆನಂದವೂ ಸಿಹಿಯಾಗಿರುತ್ತದೆ.

*ಆರತಿ*

ಅ. ೪ ರಿಂದ ೫ ಆರತಿಗಳನ್ನು ಹಾಡಬೇಕು. ಆರತಿಯ ಶಬ್ದಗಳತ್ತ ಗಮನ ಕೊಟ್ಟು ಶ್ರೀ ಗಣೇಶನನ್ನು ಭಕ್ತಿಭಾವದಿಂದ ಸ್ಮರಿಸುತ್ತಾ ಭಾವದಿಂದ ಆರತಿಯನ್ನು ಹಾಡಬೇಕು.
ಆ. ತಾಳವನ್ನು ಯೋಗ್ಯ, ಲಯಬದ್ಧ ಧ್ವನಿಯಲ್ಲಿ ಬಾರಿಸಬೇಕು.
ಇ. ‘ಶ್ರೀಗಣೇಶನೇ, ದಿನವಿಡೀ ಮಾಡಿದ ಪ್ರತಿಯೊಂದು ಕೃತಿಯು ನಿನ್ನ ಕೃಪಾಶೀರ್ವಾದದಿಂದಲೇ ನಡೆಯುತ್ತಿದೆ ಎನ್ನುವ ಅರಿವಿರಲಿ ಮತ್ತು ನಮ್ಮ ಭಕ್ತಿಭಾವವು ಹೆಚ್ಚಾಗಲಿ’ ಎಂದು ಪ್ರಾರ್ಥಿಸಬೇಕು.




ಕೃಪೆ : ಸಂಸ್ಕಾರ ಸಂಘಟನೆ ಸೇವೆ , ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ) ಕರ್ನಾಟಕ


--------------------------------------------------------


*ಗಣಪತಿಯ ಬಗೆ ಬಗೆಯ ಅವತಾರಗಳು ಇವೆ: ಒಟ್ಟಾರೆಯಾಗಿ ಹೇಳಬೇಕೆಂದರೆ 32 ಬಗೆಯ ಅವತಾರಗಳಲ್ಲಿ ಗಣಪತಿಯು ಕಾಣಿಸಿಕೊಂಡಿದ್ದಾನೆ. ಇವುಗಳಲ್ಲಿ ಕೆಲವು ಗಣಪತಿಯ ಜೀವನದ ವಿವಿಧ ಕಾಲ ಘಟ್ಟಗಳನ್ನು ಪ್ರತಿನಿಧಿಸಿದರೆ, ಇನ್ನೂ ಕೆಲವು ಲೋಕ ಕಲ್ಯಾಣಾರ್ಥವಾಗಿ ತಳೆದ ಅವತಾರಗಳಾಗಿವೆ.*

 *ಬಾಲ ಗಣಪತಿ*

    ಬಾಲ ಗಣಪತಿ ಹೆಸರೆ ಸೂಚಿಸುವಂತೆ, ಗಣಪತಿಯ ಎಳೆಯ ಮಗುವಿನ ರೂಪ. ಇದರಲ್ಲಿ ಸ್ವಾಮಿಯು ತನ್ನ ಬಾಲ್ಯದ ಸುಂದರವಾದ ಮತ್ತು ಮುದ್ದಾದ ರೂಪವಾಗಿದೆ.
    
    *ತರುಣ ಗಣಪತಿ*

    ತರುಣ ಗಣಪತಿಯು ಗಣಪತಿಯ ತಾರುಣ್ಯವನ್ನು ಪ್ರತಿನಿಧಿಸುವ ರೂಪವಾಗಿದೆ. ಇದು 8 ಕೈಗಳು ಮತ್ತು ಮುರಿದ ದಂತವನ್ನು ಹೊಂದಿರುತ್ತದೆ.
    
    *ಭಕ್ತಿ ಗಣಪತಿ*

    ಭಕ್ತಿ ಗಣಪತಿ ಎಂಬುದು ಸುಗ್ಗಿಯ ಅವಧಿಯಲ್ಲಿ ರೈತರಿಂದ ಪೂಜಿಸಲ್ಪಡುವ ಗಣಪತಿಯ ಅವತಾರವಾಗಿದೆ. ಈ ಗಣೇಶನ ಕೈಯಲ್ಲಿ ಬಾಳೆಹಣ್ಣು ಮತ್ತು ತೆಂಗಿನ ಕಾಯಿ ಇರುತ್ತದೆ.
    
    *ವೀರ ಗಣಪತಿ*

    ವೀರ ಗಣಪತಿಯ ಅವತಾರದಲ್ಲಿ ಗಣಪತಿಗೆ ಆಯುಧಗಳನ್ನು ಹಿಡಿದ 16 ಕೈಗಳು ಇರುತ್ತವೆ. ಗಣಪತಿಯ ಈ " ವೀರ" ಅವತಾರವು ಯುದ್ಧಕ್ಕೆ ಸನ್ನದ್ಧವಾಗಿರುವ ರೀತಿಯಲ್ಲಿ ಕಾಣಿಸುತ್ತದೆ.
    
    *ಶಕ್ತಿ ಗಣಪತಿ*

    ಶಕ್ತಿ ಗಣಪತಿಯ ಅವತಾರದಲ್ಲಿ ಗಣಪತಿಯ ತೊಡೆಯ ಮೇಲೆ ಸ್ವಾಮಿಯ ಒಬ್ಬ ಪತ್ನಿಯು ಹೂಮಾಲೆಯನ್ನು ಹಿಡಿದು ಕುಳಿತಿರುತ್ತಾಳೆ. ಈತನು ಕುಟುಂಬವನ್ನು ಕಾಪಾಡುವ ದೇವರು ಎಂದು ಪೂಜಿಸಲಾಗುತ್ತದೆ.
    
    *ದ್ವಿಜ ಗಣಪತಿ*

    "ದ್ವಿಜ" ಎಂದರೆ ಎರಡು ಬಾರಿ ಜನಿಸಿದವನು ಎಂದರ್ಥ. ಗಣೇಶನು ನಿಜವಾಗಿಯೂ ಎರಡು ಬಾರಿ ಜನಿಸಿದವನು. ಮೊದಲು ಜನಿಸಿ, ನಂತರ ಕೊಲ್ಲಲ್ಪಟ್ಟು ಆ ಮೇಲೆ ಪುನಃ ಜೀವವನ್ನು ಪಡೆದವನು. ಈ ಅವತಾರದಲ್ಲಿ ಗಣಪತಿಗೆ 4 ತಲೆಗಳು ಇವೆ.
   
   *ಸಿದ್ಧಿ ಗಣಪತಿ*

    ಸಿದ್ಧಿ ಗಣಪತಿಯನು ಯಶಸ್ಸು ಮತ್ತು ಸಂಪತ್ತಿನ ಸಲುವಾಗಿ ಪೂಜಿಸಲಾಗುತ್ತದೆ. ಈ ಗಣಪತಿಯ ಮೂರ್ತಿಯು ಹಳದಿ ಬಣ್ಣದಲ್ಲಿರುತ್ತದೆ.
  
    *ಉಚ್ಚಿಷ್ಟ ಗಣಪತಿ*

    ಈ ಗಣಪತಿಯು ಸಹ ಹಲವು ಕೈಗಳಿಂದ ಸುಂದರವಾಗಿ ಕಾಣುತ್ತಾನೆ. ತಿಳಿ ನೀಲಿ ಬಣ್ಣದ ಈ ಗಣಪತಿಯು 6 ಕೈಗಳನ್ನು ಹೊಂದಿದ್ದು, ಕೈಯಲ್ಲಿ ವೀಣೆಯಂತಹ ಸಂಗೀತ ವಾದ್ಯಗಳನ್ನು ಹಿಡಿದಿರುತ್ತಾನೆ.
    
    *ವಿಘ್ನ ಗಣಪತಿ*

    ಗಣಪತಿಯನ್ನು "ವಿಘ್ನೇಶ್ವರ, ವಿಘ್ನನಾಶಕ" ಎಂದು ಸಹ ಕರೆಯುತ್ತಾರೆ. ಚಿನ್ನದ ಬಣ್ಣದ ಈ ಗಣಪತಿಯ ವಿಗ್ರಹವು ನಿಮಗೆ ಎದುರಾಗುವ ಎಲ್ಲಾ ಕಂಟಕಗಳನ್ನು ನಿವಾರಿಸುತ್ತಾನೆ.
    
    *ಕ್ಷಿಪ್ರ ಗಣಪತಿ*

    ಕೆಂಪು ವರ್ಣದ ಈ ಗಣಪತಿಯು ಹೆಸರೇ ಸೂಚಿಸುವಂತೆ ಕಾರ್ಯಗಳನ್ನು ಕ್ಷಿಪ್ರವಾಗಿ ಸಿದ್ಧಿಸಿಕೊಳ್ಳಲು ನೆರವಾಗುತ್ತಾನೆ.
   
    *ಹೇರಂಬ ಗಣಪತಿ*

    ಹೇರಂಬ ಗಣಪತಿಯು ದೀನರನ್ನು ಉದ್ಧಾರ ಮಾಡಲು ಅವತರಿಸಿದ ಗಣಪತಿಯಾಗಿದ್ದಾನೆ. ಈತನಿಗೆ 5 ತಲೆಗಳು ಇದ್ದು, ನೆಗೆಯಲು ಸಿದ್ಧವಾಗಿರುವ ಸಿಂಹದ ವಾಹನವನ್ನು ಏರಿರುವ ಅವತಾರ ಇದಾಗಿದೆ.
    
    *ಲಕ್ಷ್ಮೀ ಗಣಪತಿ*

    ಲಕ್ಷ್ಮೀ ಮತ್ತು ಗಣಪತಿಯನ್ನು ಸಹೋದರ -ಸಹೋದರಿಯರಂತೆ ಕಾಣಲಾಗುತ್ತದೆ. ಚಿನ್ನದ ಬಣ್ಣದ ಈ ಗಣಪತಿಯನ್ನು ಹಣ ಮತ್ತು ಐಶ್ವರ್ಯಗಳ ಸಂಕೇತವಾಗಿ ಪೂಜಿಸಲಾಗುತ್ತದೆ.
   
    *ಮಹಾ ಗಣಪತಿ*

    "ಮಹಾ" ಎಂಬ ಮಾತೇ "ಶ್ರೇಷ್ಟ" ಎಂಬುದನ್ನು ಸೂಚಿಸುತ್ತದೆ. ಕೆಂಪು ಬಣ್ಣದಲ್ಲಿರುವ ಈ ಗಣಪತಿಯು, ತನ್ನ ಶಕ್ತಿಯ ಜೊತೆಯಲ್ಲಿ ಕುಳಿತಿರುತ್ತಾನೆ.
    
    *ವಿಜಯ ಗಣಪತಿ*

    ವಿಜಯ ಗಣಪತಿಯು ಹೆಸರೇ ಸೂಚಿಸುವಂತೆ "ವಿಜಯ"ದ ಸಂಕೇತ. ಈತನಿಗೆ ನಾಲ್ಕು ಕೈಗಳು ಇದ್ದು, ಮೂಷಿಕ ವಾಹನನಾಗಿ ಕಾಣಿಸುತ್ತಾನೆ.
    
    *ನೃತ್ಯ ಗಣಪತಿ*

    ಗಣಪತಿಯು ತನ್ನ ಅಗಾಧ ದೇಹದ ಹೊರತಾಗಿಯೂ ನೃತ್ಯವನ್ನು ಮಾಡುವ ಭಂಗಿಯಲ್ಲಿ ಇಲ್ಲಿ ಕಾಣಿಕೊಳ್ಳುತ್ತಾನೆ. ನೃತ್ಯ ಮಾಡುವ ಗಣಪತಿಯ ಅಂದಕ್ಕೆ ಬೆರಗಾಗದೆ ಇರುವವರು ಯಾರಿದ್ದಾರೆ?
    
    *ಊರ್ಧ್ವ ಗಣಪತಿ*

    ಊರ್ಧ್ವ ಗಣಪತಿ ಎಂದರೆ" ಉದ್ದವಾಗಿ ಇರುವ ಗಣಪತಿ" ಎಂದರ್ಥ. ಈ ಗಣಪತಿಯು ಪ್ರಮುಖವಾಗಿ ಹಿಡುವಳಿಯನ್ನು ಹರಸುವ ಗಣಪತಿಯಂತೆ ಕಾಣುತ್ತಾನೆ. ಈತನ ಕೈಯಲ್ಲಿ ಭತ್ತ, ನೈದಿಲೆ, ಕಬ್ಬಿನ ಜಲ್ಲೆಗಳನ್ನು ನಾವು ಕಾಣಬಹುದು.
    
    *ಏಕಾಕ್ಷರ ಗಣಪತಿ*

    "ಏಕಾಕ್ಷರ ಗಣಪತಿ"ಯು ಹೆಸರೇ ಸೂಚಿಸುವಂತೆ "ಒಂದೆ ಅಕ್ಷರದ "ಗಣಪತಿಯಾಗಿರುತ್ತಾನೆ. ಈತನು ಕೆಂಪು ಬಣ್ಣದಲ್ಲಿದ್ದು, ಮೂಷಿಕ ವಾಹನನಾಗಿ ನಮಗೆ ಕಾಣಿಸುತ್ತಾನೆ.
    
    *ವರದ ಗಣಪತಿ*

    ನಿಮಗೆ ಯಾವುದಾದರು ಒಂದು ವರ ಬೇಕೆ? ಹಾಗಾದರೆ ನೀವು ವರದ ಗಣಪತಿಯನ್ನು ಪೂಜಿಸಿ. ಈತನಿಗೆ "ಮೂರನೆ ಕಣ್ಣು" ಇದೆ. ಇದು ಜ್ಞಾನವನ್ನು ಪ್ರತಿನಿಧಿಸುತ್ತದೆ.
    
    *ತ್ರಯಾಕ್ಷರ ಗಣಪತಿ*

    ಈ ಗಣಪತಿಯು ಮೂರು ಅಕ್ಷರದ ಗಣಪತಿಯಾಗಿದ್ದು, ಕೈಯಲ್ಲಿ ತನ್ನ ಪ್ರೀತಿಯ ತಿನಿಸಾದ ಮೋದಕವನ್ನು ಹಿಡಿದು ತಿನ್ನುತ್ತಿರುವುದನ್ನು ಕಾಣಬಹುದು.
    
    *ಕ್ಷಿಪ್ರ ಪ್ರಸಾದ ಗಣಪತಿ*

    ಈ ಗಣಪತಿಯು ನಿಮ್ಮ ಕೋರಿಕೆಯನ್ನು ಅತಿ ಶೀಘ್ರದಲ್ಲಿಯೇ ಪೂರೈಸುವನೆಂದು ಭಾವಿಸಲಾಗಿದೆ.
    
    *ಹರಿದ್ರ ಗಣಪತಿ*

    ಹರಿದ್ರ ಗಣಪತಿಯು ಸುಂದರವಾದ ಚಿನ್ನದ ಬಣ್ಣವನ್ನು ಹೊಂದಿದ್ದು, ಹಳದಿ ಬಣ್ಣದ ರಾಜ ಠೀವಿಯಿಂದ ಕೂಡಿದ ವಸ್ತ್ರವನ್ನು ಧರಿಸಿರುತ್ತಾನೆ.
    
    *ಏಕದಂತ ಗಣಪತಿ*

    ಈ ಗಣಪತಿಯು ಒಂದೇ ಒಂದು ದಂತವನ್ನು ಮಾತ್ರ ಹೊಂದಿದ್ದು, ನೀಲಿಬಣ್ಣದಿಂದ ಕೂಡಿರುತ್ತಾನೆ.
    
    *ಸೃಷ್ಟಿ ಗಣಪತಿ*

    ಗಣಪತಿಯ ಈ ಸಣ್ಣರೂಪವು ಮೂಷಿಕ ವಾಹನವಾಗಿದ್ದು, ಒಳ್ಳೆಯ ಮೂಡ್‍ನಲ್ಲಿ ಕಾಣಿಸಿಕೊಳ್ಳುತ್ತಾನೆ.
    
    *ಉದ್ಧಂಡ ಗಣಪತಿ*

    ಉದ್ಧಂಡ ಗಣಪತಿಯು ವಿಶ್ವದಲ್ಲಿ 'ಧರ್ಮವನ್ನು ಪರಿಪಾಲಿಸುತ್ತಾನೆ" . ಈ ಗಣಪತಿಯು 10 ಕೈಗಳನ್ನು ಹೊಂದಿದ್ದು, ವಿಶ್ವದಲ್ಲಿರುವ ಎಲ್ಲಾ 10 ಒಳ್ಳೆಯ ಅಂಶಗಳನ್ನು ಪ್ರತಿನಿಧಿಸುತ್ತಾನೆ.
    
    *ಋಣಮೋಚನ ಗಣಪತಿ*

    ಈ ಗಣಪತಿಯು ಮಾನವ ಕುಲವನ್ನು ಕೀಳರಿಮೆ ಮತ್ತು ಸಾಲಗಳಿಂದ ಮುಕ್ತಗೊಳಿಸುತ್ತಾನೆ. ಗಣಪತಿಯ ಈ ಅವತಾರವು ಬೂದು ಬಣ್ಣದಿಂದ ಕೂಡಿರುತ್ತದೆ.
    
    *ದುಂಧಿ ಗಣಪತಿ*

    ದುಂಧಿ ಗಣಪತಿಯು ಕೆಂಪು ವರ್ಣದಲ್ಲಿದ್ದು, ಕೈಗಳಲ್ಲಿ ರುದ್ರಾಕ್ಷದ ಮಾಲೆಯನ್ನು ಹೊಂದಿರುತ್ತಾನೆ.
    
    *ದ್ವಿಮುಖ ಗಣಪತಿ*

    ದ್ವಿಮುಖ ಗಣಪತಿಯು ಹೆಸರೇ ಸೂಚಿಸುವಂತೆ, ಎರಡು ತಲೆಗಳನ್ನು ಹೊಂದಿದ್ದು, ಎರಡು ಕಡೆಗೆ ಮುಖ ಮಾಡಿರುತ್ತಾನೆ. ಈತನ ಬಣ್ಣ ನೀಲಿ.
    
    *ತ್ರಿಮುಖ ಗಣಪತಿ*

    ತ್ರಿಮುಖ ಗಣಪತಿಯು ಮೂರು ಮುಖಗಳನ್ನು ಹೊಂದಿದ್ದು, ಚಿನ್ನದ ಕಮಲದ ಹೂವಿನ ಮೇಲೆ ಆಸೀನನಾಗಿರುತ್ತಾನೆ.
    
    *ಸಿಂಹ ಗಣಪತಿ*

    ಸಿಂಹ ಗಣಪತಿಯು ತಾನು ಕುಳಿತ ಸಿಂಹದಿಂದಾಗಿ ಈ ಹೆಸರು ಪಡೆದಿರುತ್ತಾನೆ.
    
    *ಯೋಗ ಗಣಪತಿ*

    ಯೋಗ ಗಣಪತಿಯು ಪದ್ಮಾಸನದಲ್ಲಿ ಕುಳಿತಿರುತ್ತಾನೆ ಮತ್ತು ಧ್ಯಾನ ಯೋಗ ನಿರತನಂತೆ ಕಾಣುತ್ತಾನೆ.
   
    *ದುರ್ಗಾ ಗಣಪತಿ*

    ದುರ್ಗಾ ಗಣಪತಿಯು ಗಣಪತಿಯ ಒಂದು ಅವತಾರವಾಗಿದ್ದು, ಈ ಅವತಾರದಲ್ಲಿ ಈತ ತನ್ನ ಮಾತೆಯಾದ ದುರ್ಗಾ ದೇವಿಯಿಂದ ಶಕ್ತಿಗಳನ್ನು ಸಂಪಾದಿಸಿರುತ್ತಾನೆ.
   
    *ಸಂಕಷ್ಟ ಹರ ಗಣಪತಿ*

    ಗಣಪತಿಯ ಈ ಅದ್ಭುತ ಅವತಾರವು ಮಾನವ ಕುಲದ ಸಂಕಷ್ಟಗಳನ್ನು ನಿವಾರಿಸುತ್ತದೆ. 
–>